- ಮುಂದೆಯೂ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ
- ಕಾಂಗ್ರೆಸ್ನವರೇ ಸಿದ್ದರಾಮಯ್ಯರನ್ನು ಸೋಲಿಸುತ್ತಾರೆ
ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಬದಾಮಿಯಲ್ಲಿ ಸೋಲಿನ ಭೀತಿ ಖಚಿತವಾಗಿರುವ ಕಾರಣ ಅವರು ಕ್ಷೇತ್ರ ಬಿಟ್ಟು ತೆರಳಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬದಾಮಿಯಲ್ಲಿ ನಡೆಸಿರುವ ಆಂತರಿಕ ಸರ್ವೆಯಲ್ಲಿ ಸಿದ್ದರಾಮಯ್ಯನವರಿಗೆ ಸೋಲು ಎಂಬ ಮಾಹಿತಿ ಇದೆ. ಈ ಹಿನ್ನೆಲೆ ಅವರು ಬದಾಮಿ ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯನವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ಕಾಂಗ್ರೆಸ್ ಪಕ್ಷದವರೇ ಅವರು ಎಲ್ಲೇ ನಿಂತರೂ ಸೋಲುವಂತೆ ಮಾಡುತ್ತಾರೆ ಎಂದು ನಿರಾಣಿ ತಿಳಿಸಿದರು.
ಇನ್ನು ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮ ಸರ್ಕಾರ ಎಲ್ಲ ಸಮಾಜದವರಿಗೆ ಅನುಕೂಲ ಮಾಡಿದೆ ಎಂದರು.
ಸರ್ವರ ಅಭಿವೃದ್ಧಿ ಬಿಜೆಪಿ ಮೂಲಮಂತ್ರ. ಅದಕ್ಕೆ ಪಕ್ಷ ಹೆಚ್ಚು ಒತ್ತು ನೀಡುತ್ತಿದೆ. ವಿರೋಧ ಮಾಡುವ ಕಾಂಗ್ರೆಸ್ ಪಕ್ಷದವರು, ಮೀಸಲಾತಿ ವಿಚಾರವಾಗಿ ಸಮಗ್ರ ಮಾಹಿತಿ ತಿಳಿದುಕೊಂಡು ಮಾತನಾಡಬೇಕು ಎಂದು ಮುರುಗೇಶ್ ನಿರಾಣಿ ಹೇಳಿದರು.
ಮುಂದೆ ನಮ್ಮ ಸರ್ಕಾರ ಬಂದಾಗ ಈಗ ಜಾರಿಗೆ ತಂದಿರುವ ಎಲ್ಲಾ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೂ ನಿರಾಣಿ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ನವರು, ಅಧಿಕಾರಕ್ಕೆ ಬರುವುದಿಲ್ಲ ಎಂದಾದ ಮೇಲೆ ಅವರೇನು ಬದಲಾವಣೆ ಮಾಡುತ್ತಾರೆ ಎಂದ ನಿರಾಣಿ, ಮುಂದೆಯೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ, ನಾವೇ ಸರ್ಕಾರ ಮಾಡುತ್ತೇವೆ ಎಂದರು.
ಈ ಸುದ್ದಿ ಓದಿದ್ದೀರಾ? :ಕಾಕಂಬಿ ಹಗರಣದ ತನಿಖೆಯಾದರೆ ಮಾಡಾಳ್ರಂತೆ ಸಿಎಂ ಬೊಮ್ಮಾಯಿ ಜೈಲುಪಾಲು: ಕಾಂಗ್ರೆಸ್
ಮರಳಿ ಮುಖ್ಯಮಂತ್ರಿಯಾಗುವೆ ಎಂದಿದ್ದ ಬೊಮ್ಮಾಯಿ ಅವರ ಹೇಳಿಕೆ ವಿಚಾರದಲ್ಲಿ ಮಾತನಾಡಿದ ನಿರಾಣಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮರಳಿ ಸಿಎಂ ಆದರೂ ತಪ್ಪೇನಿದೆ.
ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಅವರೇ ಮುಖ್ಯಮಂತ್ರಿ ಆದಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದರು.