ಜಮಿಯತ್ ಉಲಮಾ-ಐ ಹಿಂದ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮೊದಲಾದ ಸಂಘಟನೆಗಳು ಸಲಿಂಗ ವಿವಾಹ ಸಾಮಾಜಿಕ ವ್ಯವಸ್ಥೆಗೆ ತಕ್ಕುದಲ್ಲ ಎಂಬ ಅಭಿಪ್ರಾಐದಲ್ಲಿ ಸಲಿಂಗ ವಿವಾಹಗಳ ಸಿಂಧುತ್ವವನ್ನು ವಿರೋಧಿಸಿವೆ.
ಸಲಿಂಗ ವಿವಾಹ ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವ ಐವರು ಸದಸ್ಯರ ಪೀಠ ಮಂಗಳವಾರದಿಂದ (ಏಪ್ರಿಲ್ 18) ವಿಚಾರಣೆ ನಡೆಸುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಕನಿಷ್ಠ 15 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ವಿಷಯ ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಪೀಠ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು.
ಸಲಿಂಗ ವಿವಾಹ ಕುರಿತು ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಎಸ್ ರವೀಂದ್ರ ಭಟ್, ಪಿ ಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರ ಐವರು ಸದಸ್ಯರ ಪೀಠ ವಿಚಾರಣೆ ನಡೆಸುತ್ತಿದೆ.
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿರುವ ಅರ್ಜಿಗಳು ನಗರ ಜನರ ಸಂಸ್ಕೃತಿಯಾಗಿದೆ. ಮದುವೆಗೆ ಮಾನ್ಯತೆ ನೀಡುವುದು ಶಾಸಕಾಂಗದ ಕೆಲಸ. ಹಾಗಾಗಿ, ಇಂತಹ ವಿಚಾರಗಳಲ್ಲಿ ತೀರ್ಪು ನೀಡುವುದರಿಂದ ನ್ಯಾಯಾಲಯ ಹಿಂದಕ್ಕೆ ಸರಿಯಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸೋಮವಾರ (ಏಪ್ರಿಲ್ 17) ಪ್ರಮಾಣಪತ್ರ ಸಲ್ಲಿಸಿದೆ.
ಏನಿದು ಚರ್ಚೆ?
ಸಲಿಂಗ ವಿವಾಹ ಕುರಿತ ಐಪಿಸಿ ಸೆಕ್ಷನ್ 377 ಅನ್ನು 2018ರಲ್ಲಿ ಸುಪ್ರೀಂ ಕೋರ್ಟ್ ಅಮಾನ್ಯಗೊಳಿಸಿತು. ಈ ಕಾಯಿದೆಯು ಪ್ರಕೃತಿಯ ಕ್ರಮಕ್ಕೆ ವಿರುದ್ಧವಾಗಿ ಮಾಡುವ ಸಮ್ಮತಿಯ ಲೈಂಗಿಕತೆಯನ್ನು ಅಪರಾಧವೆಂದು ಪರಿಗಣಿಸುತ್ತತ್ತಿತ್ತು.
ಸಲಿಂಗಕಾಮ ಈಗ ಸಮಾಜದಲ್ಲಿ ಪ್ರಮಖ ವಿಷಯವಾಗಿ ಪರಿಗಣಿಸಲ್ಪಡುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ನಿಷೇಧ ಮತ್ತು ತಾರತಮ್ಯ ಕಡಿಮೆ ಮಾಡುವ ಯತ್ನದಲ್ಲಿ ಸಲಿಂಗ ವಿವಾಹ ಮಹತ್ವ ಹೊಂದಿದೆ.
ಆದ್ದರಿಂದ ಇದನ್ನು ಕಾನೂನುಬದ್ಧಗೊಳಿಸುವುದು ಮತ್ತು ಸಮಾಜದೊಳಗೆ ಸಲಿಂಗಕಾಮವನ್ನು ಸಾಮಾನ್ಯಗೊಳಿಸಲು ದೀರ್ಘಾವಧಿಯಿಂದ ಪ್ರಯತ್ನ ನಡೆಯುತ್ತಿದೆ.
ಸಲಿಂಗ ವಿವಾಹ ಕಾನೂನುಬದ್ಧ ಸಂಬಂಧ ಪರವಾದ ವಾದಗಳು
ಮಕ್ಕಳ ಹಕ್ಕುಗಳ ರಕ್ಷಣೆಯ ದೆಹಲಿ ಆಯೋಗ (ಡಿಸಿಪಿಸಿಆರ್) ಸಲಿಂಗ ವಿವಾಹಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಬೆಂಬಲಿಸಿದೆ.
ಸಲಿಂಗ ಕುಟುಂಬ ಘಟಕಗಳು ಸಾಮಾನ್ಯವಾಗಿವೆ. ಅಂತಹ ಕುಟುಂಬ ಘಟಕಗಳನ್ನು ಪ್ರೋತ್ಸಾಹಿಸಲು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಹೇಳಿದೆ.
“ಸಲಿಂಗ ದಂಪತಿಗಳು ಉತ್ತಮ ಪೋಷಕರಾಗಬಹುದು ಎಂದು ಅನೇಕ ಅಧ್ಯಯನಗಳು ಹೇಳಿವೆ. ಸುಮಾರು 50 ದೇಶಗಳು ಸಲಿಂಗ ದಂಪತಿಗಳು ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳಲು ಅನುಮತಿಸಿವೆ” ಎಂದು ದೆಹಲಿ ಮಕ್ಕಳ ಆಯೋಗ ವಾದಿಸಿದೆ.
ಸಲಿಂಗ ವಿವಾಹ ಮೂಲಕ ದಂಪತಿಗೆ ಬದುಕುವ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯ, ಘನತೆಯ ಹಕ್ಕು ಮತ್ತು ಇತರ ಸಂಬಂಧಿತ ಹಕ್ಕುಗಳು ದೊರೆಯಲು ಸಾಂವಿಧಾನಿಕ ಮಾನ್ಯತೆ ದೊರೆಯಬೇಕು ಎಂದು ಅರ್ಜಿದಾರರು ಬೇಡಿಕೆಯಿಟ್ಟಿದ್ದಾರೆ.
ಕಳೆದ ವಾರ ಭಾರತೀಯ ಮನೋವೈದ್ಯಕೀಯ (ಐಪಿಎಸ್) ಸಮಾಜದಲ್ಲಿ ಸಲಿಂಗ ಕುಟುಂಬ ಘಟಕಗಳ ಸೇರ್ಪಡೆಯನ್ನು ಬೆಂಬಲಿಸಲಾಗಿದೆ.
ಸಲಿಂಗ ಕಾಮ ಅನಾರೋಗ್ಯಕರವಲ್ಲ ಎಂದು ವೈದ್ಯಕೀಯ ಸಂಸ್ಥೆ ನೀಡಿದ ವರದಿಯು ಸಲಿಂಗ ಕಾಮ ಅಪರಾಧವಲ್ಲ ಎಂದ 2018ರ ಸುಪ್ರೀಂ ಕೋರ್ಟ್ನ ತೀರ್ಪಿನಲ್ಲಿ ಪ್ರಮುಖ ಪಾತ್ರವಹಿಸಿದೆ.
ಸಲಿಂಗ ವಿವಾಹ ಕಾನೂನುಬದ್ಧ ವಿರುದ್ಧದ ವಾದಗಳು
ಏತನ್ಮಧ್ಯೆ ಕೇಂದ್ರದ ಬಿಜೆಪಿ ಸರ್ಕಾರ ಸಲಿಂಗ ವಿವಾಹಗಳ ಕಲ್ಪನೆಯನ್ನು ಪದೇಪದೆ ವಿರೋಧಿಸಿದೆ. ಇದು ವೈಯಕ್ತಿಕ ಕಾನೂನುಗಳು ಮತ್ತು ವ್ಯಾಪಕವಾಗಿ ಗುರುತಿಸಲ್ಪಟ್ಟ ಸಾಮಾಜಿಕ ಮೌಲ್ಯಗಳ ಸಮತೋಲನಕ್ಕೆ ಸಂಪೂರ್ಣ ಹಾನಿ ಉಂಟುಮಾಡುತ್ತದೆ ಎಂದು ವಾದಿಸಿದೆ.
“ಇದು ಕೇವಲ ನಗರದ ಗಣ್ಯರ ಮನಸ್ಥಿತಿ ಪ್ರತಿಬಿಂಬಿಸುತ್ತದೆ” ಎಂದು ಕೇಂದ್ರ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ಗೆ ಸೋಮವಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದೆ.
ಅರ್ಜಿದಾರರು ಸಲಿಂಗ ವಿವಾಹಗಳನ್ನು ಮೂಲಭೂತ ಹಕ್ಕು ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿವಾಹವು ಸಾಮಾಜಿಕ–ನ್ಯಾಯಿಕ ಆಚರಣೆಯಾಗಿದ್ದು, ಸಂವಿಧಾನದ 26ನೇ ವಿಧಿಯನ್ವಯ ಸ್ಥಾಪಿಸಲಾದ ಶಾಸನದಿಂದ ನಿಯಂತ್ರಿಸಲಾಗುತ್ತದೆ. ಜತೆಗೆ ಕಾನೂನಿನ ಪಾವಿತ್ರ್ಯತೆಯಿಂದ ಗುರುತಿಸಿ ಅನುಗ್ರಹಿಸುವುದಾಗಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಈ ಸುದ್ದಿ ಓದಿದ್ದೀರಾ? ಸಲಿಂಗ ಮದುವೆ ಮಾನ್ಯತೆ ಕೋರಿ ಅರ್ಜಿ; ತೀರ್ಪು ನೀಡದಂತೆ ಸುಪ್ರೀಂಗೆ ಕೇಂದ್ರದ ಮನವಿ
ಜಮಿಯತ್ ಉಲಮಾ-ಐ ಹಿಂದ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮೊದಲಾದ ಸಂಘಟನೆಗಳು ಸಲಿಂಗ ವಿವಾಹಗಳ ಸಿಂಧುತ್ವವನ್ನು ವಿರೋಧಿಸಿವೆ.
ಸಲಿಂಗ ವಿವಾಹ ಕುಟುಂಬ ಪರಿಸರ ವ್ಯವಸ್ಥೆಗೆ ಅಪಾಯಕಾರಿ ಎಂದು ಪ್ರತಿಪಾದಿಸಿವೆ. ಹಿಂದೂಗಳಲ್ಲಿ ವಿವಾಹದ ಗುರಿ ಕೇವಲ ದೈಹಿಕ ಸಂತೋಷ ಅಥವಾ ಸಂತಾನ ಪಡೆಯುವುದಲ್ಲ. ಇದು ಆಧ್ಯಾತ್ಮಿಕ ಪ್ರಗತಿಯಾಗಿದೆ. ಇದು ಹಿಂದೂಗಳಲ್ಲಿರುವ 16 ‘ಸಂಸ್ಕಾರ’ಗಳಲ್ಲಿ ಒಂದಾಗಿದೆ ಎಂದು ಜಮಿಯತ್ ಉಲ್ಲೇಖಿಸಿದೆ.