- ಸುಡಾನ್ ಸಂಘರ್ಷ ಪರಿಣಾಮ 200 ಮಂದಿ ಸಾವು
- ಏಪ್ರಿಲ್ 15ರಿಂದ ದೇಶದಲ್ಲಿ ಆರಂಭವಾಗಿರುವ ಘರ್ಷಣೆ
ಸುಡಾನ್ ಸಂಘರ್ಷ ಆರಂಭವಾದ ಮೂರು ದಿನದಲ್ಲೇ ಅಪಾರ ಪ್ರಮಾಣದಲ್ಲಿ ಜೀವ ಹಾನಿಯಾಗಿದೆ. ಈ ಸಂಘರ್ಷಪೀಡಿತ ನಗರದಲ್ಲಿ 31 ಮಂದಿ ಬುಡಕಟ್ಟು ಸಮುದಾಯದ ಕನ್ನಡಿಗರು ಸಿಲುಕಿರುವುದು ವರದಿಯಾಗಿದೆ.
ಸುಡಾನ್ ದೇಶದ ಎಲ್ ಫಾಷರ್ ನಗರದಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಶನಿವಾರದಿಂದ (ಏಪ್ರಿಲ್ 15) ಸಂಘರ್ಷ ಉಂಟಾಗಿದೆ. ಇದು ಈಗ ತೀವ್ರ ಸ್ವರೂಪ ಪಡೆದಿದೆ.
ಸುಡಾನ್ ಸಂಘರ್ಷ ನಡೆಯುತ್ತಿರುವ ಸ್ಥಳದಲ್ಲಿ ಮಹಿಳೆಯರೂ ಸೇರಿ 31 ಮಂದಿ ಕನ್ನಡಿಗರು ಸಿಲುಕಿದ್ದಾರೆ. ನೀರು, ಆಹಾರ ಸಿಗದೆ ಕಂಗಾಲಾಗಿದ್ದಾರೆ. ಸಂತ್ರಸ್ತರು ನೆರವಿಗಾಗಿ ಭಾರತದ ಮತ್ತು ಕರ್ನಾಟಕ ಮಾಧ್ಯಮಗಳಿಗೆ ರಕ್ಷಣೆಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಮಾಧ್ಯಮಗಳು ಸೋಮವಾರ (ಏಪ್ರಿಲ್ 17) ವರದಿ ಮಾಡಿವೆ.
ಕನ್ನಡಿಗರು ಮಾಧ್ಯಮಗಳಿಗೆ ವಿಡಿಯೋಗಳನ್ನು ಕಳುಹಿಸುತ್ತಿದ್ದು, ಸುಡಾನ್ ಸಂಘರ್ಷ ಪರಿಣಾಮದ ಬಗ್ಗೆ ವಿವರಿಸಿದ್ದಾರೆ. “ನಾವು ಸುಡಾನ್ನಲ್ಲಿ ಬಾಡಿಗೆ ಮನೆಯಲ್ಲಿ ಸಿಲುಕಿದ್ದೇವೆ. ಶಿವಮೊಗ್ಗದ 7 ಮಂದಿ, ಮೈಸೂರು ಹಾಗೂ ಇತರ ಕಡೆಗಳ 19 ಮಂದಿ ಸಿಲುಕಿದ್ದೇವೆ. ನಗರದ ನಾನಾ ಕಡೆಗಳಲ್ಲಿ ಹಲವಾರು ಮಂದಿ ಕನ್ನಡಿಗರು ಸಿಲುಕಿದ್ದೇವೆ. ರಸ್ತೆಗಳಲ್ಲಿ ಮೃತದೇಹಗಳು ಕಾಣಿಸುತ್ತಿವೆ. ಇದರಿಂದ ಭಯಭೀತರಾಗಿದ್ದೇವೆ” ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ ಎಸ್ ಪ್ರಭು ಎಂಬವರು ವಿಡಿಯೋವೊಂದರಲ್ಲಿ ಹೇಳಿದ್ದಾರೆ.
ಸುಡಾನ್ನಲ್ಲಿ ಸೇನೆಯ ನಡುವೆ ಸಂಘರ್ಷದಿಂದ ಪ್ರಭು ಅವರು ವಿಡಿಯೋ ಮಾಡುವಾಗಲೂ ಹಿನ್ನೆಲೆಯಲ್ಲಿ ಗುಂಡಿನ ದಾಳಿ, ಶೆಲ್ ದಾಳಿಯ ಸದ್ದು ಕೇಳಿ ಬರುತ್ತಿತ್ತು. “ತಕ್ಷಣವೇ ಈ ಪ್ರದೇಶ ತೆರವು ಮಾಡಿ, ರಾಕೆಟ್ ದಾಳಿ ನಡೆಯುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ. ಇಲ್ಲಿ ಆಹಾರ, ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಮೂರು ದಿನಗಳ ನಂತರ, ಇಲ್ಲಿ ಒಂದು ಅಂಗಡಿ ತೆರೆದಿದೆ, ನಾವು ಪಡಿತರ ಪಡೆದಿದ್ದೇವೆ. ಇಲ್ಲಿನ ಪರಿಸ್ಥಿತಿ ಬಹಳ ಅಪಾಯಕಾರಿಯಾಗಿ ಬದಲಾಗಿದೆ” ಎಂದು ಪ್ರಭು ಅಳಲು ತೋಡಿಕೊಂಡಿದ್ದಾರೆ.
ಗುಂಡಿನ ದಾಳಿಯಿಂದಾಗಿ ಕಟ್ಟಡಗಳಿಗೆ ಹಾನಿಯಾಗಿರುವ ಚಿತ್ರಗಳನ್ನೂ ಪ್ರಭು ಕಳುಹಿಸಿದ್ದಾರೆ.
ಸುಡಾನ್ ಸಂಘರ್ಷ ನಡೆಯುತ್ತಿರುವ ಎಲ್ ಫಾಷರ್ನಲ್ಲಿ ಕರ್ನಾಟಕದ ಅನೇಕರು ಸಿಲುಕಿದ್ದಾರೆ. ಈ ಪೈಕಿ ಹೆಚ್ಚಿನವರು ಅಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಇವರು ಕಳೆದ ಕೆಲವು ವರ್ಷಗಳಲ್ಲಿ ಕೆಲಸ ಅರಸಿ ಸುಡಾನ್ಗೆ ವಲಸೆ ಹೋಗಿದ್ದರು.
“ಸುಡಾನ್ ಸಂಘರ್ಷ ಎರಡು ದಿನಗಳಾದರೂ ಕಡಿಮೆಯಾಗಿಲ್ಲ. ನಾವು ಎಲ್ಲ ಭಾರತೀಯರನ್ನು ಅವರು ಇರುವಲ್ಲಿಯೇ ಮತ್ತು ಹೊರಗೆ ಹೋಗದಂತೆ ವಿನಂತಿಸುತ್ತೇವೆ. ಅಗತ್ಯ ವಸ್ತುಗಳಾದ ಔಷಧಿ, ನೀರು, ಹಣ, ಪಾಸ್ಪೋರ್ಟ್, ಒಸಿಐ ಕಾರ್ಡ್ ಜತೆಗೆ ಇಟ್ಟುಕೊಳ್ಳಿ. ಯಾವುದೇ ಕ್ಷಣ ಸಂಚಾರಕ್ಕೆ ಅನುವಾಗುವಂತೆ ಆಹಾರ ಸಿದ್ಧಪಡಿಸಿಟ್ಟುಕೊಳ್ಳಿ” ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮೂಲಕ ಹೇಳಿದೆ.
ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯು ರಾಜಧಾನಿ ಖಾರ್ಟೂಮ್ನಲ್ಲಿ ಪ್ರಾರಂಭವಾಗಿದ್ದು ಮತ್ತು ಎಲ್ ಫಾಷರ್ ಸೇರಿದಂತೆ ನೆರೆಯ ನಗರಗಳಿಗೆ ಹರಡಿದೆ.
ಸುಡಾನ್ ಸಂಘರ್ಷ ಪರಿಣಾಮ ಈವರೆಗೆ ಖಾರ್ಟೂಮ್ ಸೇರಿದಂತೆ ನಾನಾ ಕಡೆ ಕನಿಷ್ಠ 200 ಮಂದಿ ಮೃತಪಟ್ಟಿದ್ದು, 1800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಬೆಳವಣಿಗೆಯಿಂದ ದೇಶಾದ್ಯಂತ ಅಶಾಂತಿ, ಉದ್ವಿಗ್ನ ಸ್ಥಿತಿ ಮೂಡಿದೆ. ಒಂಡರ್ಮನ್ ನಗರ, ದಕ್ಷಿಣ ಡಾರ್ಫರ್, ನ್ಯಾಲಾ, ರಾಜಧಾನಿ ಖಾರ್ಟೂಮ್ ಸೇರಿ ನಾನಾ ನಗರಗಳನ್ನು ಸೇನೆ ಮತ್ತು ಅರೆಸೇನಾಪಡೆ (ಆರ್ಎಸ್ಎಫ್) ಶಸ್ತ್ರಸಜ್ಜಿತ ವಾಹನಗಳು, ಮಷಿನ್ಗನ್ ಜೋಡಿಸಲಾದ ಟ್ರಕ್ಗಳು ಆವರಿಸಿವೆ.
ಈ ಸುದ್ದಿ ಓದಿದ್ದಿರಾ? ಚುನಾವಣಾ ಆಯುಕ್ತರಾಗಿ ಅರುಣ್ ಗೋಯಲ್ ನೇಮಕ; ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಪೀಠ
ಏಪ್ರಿಲ್ 15ರಂದು ಸುಡಾನ್ನ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಘರ್ಷಣೆ ಆರಂಭವಾಗಿತ್ತು. ಸೇನೆಯು ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ನೇತೃತ್ವದಲ್ಲಿದ್ದರೆ, ಆತನ ನಂತರದ ಸ್ಥಾನದಲ್ಲಿರುವ ಮೊಹಮ್ಮದ್ ಹಮ್ದಾನ್ ಡಗ್ಲೊ ನೇತೃತ್ವದಲ್ಲಿ ಅರೆಸೇನಾ ಪಡೆ ಕಾರ್ಯನಿರ್ವಹಿಸುತ್ತಿದೆ.
ಈ ಇಬ್ಬರೂ 2021ರಲ್ಲಿ ದಂಗೆಯೆದ್ದು ದೇಶದ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. 2019ರಲ್ಲಷ್ಟೇ ಸುಡಾನ್ನಲ್ಲಿ ಒಮರ್ ಅಲ್ ಬಶೀರ್ ನೇತೃತ್ವದ ನಾಗರಿಕ ಆಡಳಿತ ಅಸ್ತಿತ್ವಕ್ಕೆ ಬಂದಿತ್ತು.