ಕೇಂದ್ರ ಸಚಿವ ನಿತಿನ್ ಗಡ್ಕರಿ ಪುತ್ರ ನಿಖಿಲ್ ಗಡ್ಕರಿಯವರ ಸಿಯಾನ್ ಆಗ್ರೋ ಇಂಡಸ್ಟ್ರೀಸ್, ಎಥೆನಾಲ್ ಉತ್ಪಾದನಾ ವಲಯವನ್ನು ಪ್ರವೇಶಿಸಿದ್ದು 2024ರಲ್ಲಿ. ಒಂದೇ ವರ್ಷದಲ್ಲಿ 510 ಕೋಟಿ ಆದಾಯ ಗಳಿಸುವ ಕಂಪನಿಯಾಗಿ ಹೊರಹೊಮ್ಮುತ್ತದೆ. ಇಲ್ಲಿ ಸ್ವಜನಪಕ್ಷಪಾತವಿಲ್ಲ, ಅಧಿಕಾರ ದುರುಪಯೋಗವಿಲ್ಲ, ಭ್ರಷ್ಟಾಚಾರ ಕೂಡ ನಡೆದಿಲ್ಲ. ಹಾಗಾದರೆ ಎಥೆನಾಲ್ನಿಂದ ಲಾಭ ಯಾರಿಗೆ? ಕಬ್ಬು ಬೆಳೆಗಾರರಿಗಾ, ರೈತರಿಗಾ, ವಾಹನ ಮಾಲೀಕರಿಗಾ?
‘ಜೂನ್ 12ರಂದು ಶೇ. 100ರಷ್ಟು ಎಥೆನಾಲ್ ಇಂಧನ ಬಳಕೆಯನ್ನು ಕಾನೂನುಬದ್ಧಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ. ಇದರೊಂದಿಗೆ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ’ ಎಂದು ನಾಗ್ಪುರದಲ್ಲಿ ನಡೆದ ಸಕ್ಕರೆ ಮತ್ತು ಜೈವಿಕ ಇಂಧನ ಸಮಾವೇಶದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಎಥೆನಾಲ್ ಇಂಧನ ಬಳಕೆಯು ಪೆಟ್ರೋಲ್ಗೆ ಪರ್ಯಾಯ ಇಂಧನವಾಗಿ ಹೊರಹೊಮ್ಮಲು ಅನುವು ಮಾಡಿಕೊಡುತ್ತದೆ. ಭಾರತದ ವಾರ್ಷಿಕ ಕಚ್ಚಾ ಇಂಧನ ಆಮದುಗಳಿಂದಾಗುತ್ತಿರುವ 22 ಲಕ್ಷ ಕೋಟಿ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರದ ಈ ನೀತಿ ನಿರ್ಧಾರದಿಂದ ದೇಶದ ಕೃಷಿ ವಲಯಕ್ಕೆ, ವಿಶೇಷವಾಗಿ ಕಬ್ಬು ಬೆಳೆಗಾರರಿಗೆ ಭಾರಿ ಲಾಭವಾಗಲಿದೆ ಎಂದು ಕೂಡ ಹೇಳಿದ್ದಾರೆ.
ದೇಶದ ಕಚ್ಚಾತೈಲ ಆಮದು ವೆಚ್ಚ ಕಡಿಮೆಯಾಗುತ್ತದೆ, ಕಡಿಮೆ ಬೆಲೆಗೆ ಗ್ರಾಹಕರಿಗೆ ಇಂಧನ ದೊರೆಯುತ್ತದೆ, ರೈತರಿಗೆ ಲಾಭ ತಂದುಕೊಡುತ್ತದೆ, ಮಾಲಿನ್ಯ ಮುಕ್ತವಾಗುತ್ತದೆ- ಇಷ್ಟೆಲ್ಲ ಲಾಭ, ಕೇಂದ್ರ ಸರ್ಕಾರದ ಒಂದು ನೀತಿನಿರ್ಧಾರದಿಂದ. ಹಾಗಾಗಿ ಈ ನಿರ್ಧಾರ ಮೇಲ್ನೋಟಕ್ಕೇ ಕ್ರಾಂತಿಕಾರಕ ಹೆಜ್ಜೆಯಂತೆ ಕಾಣುತ್ತದೆ. ಬಿಜೆಪಿ ಜನಪರವಾಗಿದೆಯಲ್ಲ ಎನಿಸುತ್ತದೆ. ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಪಡೆಯುತ್ತದೆ.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ನಿಜಕ್ಕೂ ಎಥೆನಾಲ್ ಅವಶ್ಯಕತೆ ಇದೆ. ಆದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ತತ್ ಕ್ಷಣದ ನಿರ್ಧಾರಕ್ಕೆ ತಕ್ಕಂತೆ ದೇಶದ ಜನ ಬದಲಾಗುವುದು, ವಾಹನಗಳನ್ನು ಬದಲಿಸುವುದು ಕಷ್ಟವಿದೆ. ಏಕೆಂದರೆ, 2021ರ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಘೋಷಿಸಿದರು. ನಂತರ ಸಚಿವ ಗಡ್ಕರಿಯವರು, 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಡಿ-ರಿಜಿಸ್ಟರ್ ಮಾಡಿ ಸ್ಕ್ರ್ಯಾಪ್ ಮಾಡುವ ನಿಯಮ ಜಾರಿಗೆ ತಂದರು.
ಇದನ್ನು ಓದಿದ್ದೀರಾ?: ದಾರಿದ್ರ್ಯದ ಗಾಯಕ್ಕೆ ಉಪ್ಪು ಮೆತ್ತಿದ ಬೆಲೆ ಏರಿಕೆ!
ಆ ಸಂದರ್ಭದಲ್ಲಿ, ಹಳೆಯ ವಾಹನಗಳ ಮೇಲಿನ ನಿರ್ಬಂಧ ಮತ್ತು ಹೊಸ ವಾಹನಗಳ ಖರೀದಿಗೆ ಈ ನೀತಿ ಉತ್ತೇಜಿಸುತ್ತದೆ; ವಾಹನ ತಯರಿಕಾ ಕಂಪನಿಗಳು ಮತ್ತು ಗಡ್ಕರಿ ನಡುವೆ ಅಕ್ರಮ ಒಪ್ಪಂದವೇರ್ಪಟ್ಟಿರಬಹುದು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲ, ಪಾಶ್ಚಿಮಾತ್ಯ ದೇಶಗಳಂತೆ ‘ಯ್ಯೂಸ್ ಅಂಡ್ ಥ್ರೋ’ ಸಂಸ್ಕೃತಿ ನಮ್ಮಲ್ಲಿ ಜಾರಿಗೆ ಬರದಿರುವುದು; ಜನರ ಆರ್ಥಿಕ ಸ್ಥಿತಿ ಸುಧಾರಿಸದಿರುವುದು ಚರ್ಚೆಗೆ ಬಂದಿತ್ತು. ಹಾಗಾಗಿ, ಕೇಂದ್ರದ 2021ರ 15 ವರ್ಷ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವ ನಿಯಮ ಇವತ್ತಿಗೂ, 5 ವರ್ಷಗಳಾದರೂ ಅನುಷ್ಠಾನಕ್ಕೆ ತರಲಾಗಿಲ್ಲ.
ಇದರ ನಂತರ ಗಡ್ಕರಿಯವರ ಕ್ರಾಂತಿಕಾರಕ ಆಲೋಚನೆ ಹೊರಳಿದ್ದು ಎಥೆನಾಲ್ ಕಡೆಗೆ. ಮೊದಲಿಗೆ 2021ರಲ್ಲಿ ಪೆಟ್ರೋಲ್ನೊಂದಿಗೆ ಶೇ. 20ರಷ್ಟು ಬಯೋಎಥೆನಾಲ್ ಮಿಶ್ರಣ ಮಾಡುವುದರಿಂದ ವಾಹನಗಳಿಗೂ ತೊಂದರೆಯಿಲ್ಲ, ಆಮದು ವೆಚ್ಚ ಕೂಡ ಉಳಿಯುತ್ತದೆ, ರೈತರಿಗೂ ಲಾಭವಾಗುತ್ತದೆ ಎಂಬ ದಾಳ ಉರುಳಿಸಿದರು. ಆಯ್ದ ನಗರಗಳಲ್ಲಿ ಶೇ. 2, 5, 10 ಭಾಗ ಎಥೆನಾಲ್ ಮಿಶ್ರಣ ಪೆಟ್ರೋಲ್ ಲಭ್ಯವಾಗತೊಡಗಿತು. ಎಥೆನಾಲ್ ಮಿಶ್ರಣ ಮಾಡಿದ ಪೆಟ್ರೋಲ್ ಬಳಸಿದ ವಾಹನಗಳಲ್ಲಿ ರಬ್ಬರ್ ಸೀಲ್ ಹಾನಿಗೊಳಗಾಗುವುದು, ಇಂಧನ ಪೈಪ್ ಕಟ್ಟಿಕೊಳ್ಳುವುದು, ಕಾಲಕ್ರಮೇಣ ಇಂಜಿನ್ ಭಾಗಗಳು ಸವೆಯುವುದು, ತುಕ್ಕು ಹಿಡಿಯುವುದು ಕಾಣಿಸಿಕೊಳ್ಳತೊಡಗಿತು. ಏಕೆಂದರೆ ಎಥೆನಾಲ್ ಮಿಶ್ರಣ ಮಾಡಿದ ಪೆಟ್ರೋಲ್ ಬಳಕೆಗೆ ಸೂಕ್ತವಾಗುವಂತೆ, ದೇಶದ ವಾಹನ ತಯಾರಿಕಾ ಕಂಪನಿಗಳು ವಾಹನಗಳನ್ನು ತಾಂತ್ರಿಕವಾಗಿ ವಿನ್ಯಾಸಗೊಳಿಸಿರಲಿಲ್ಲ, ಇವತ್ತಿಗೂ ಇಲ್ಲ. ಇಷ್ಟಾದರೂ ಜನ, ಯುದ್ಧ ಮತ್ತು ಮೋದಿ ಮರೆಯಲ್ಲಿ ಕಷ್ಟ-ನಷ್ಟವನ್ನೂ ಸಹಿಸಿಕೊಂಡರು.
ಈ ನಡುವೆ, ಕಳೆದ ವಾರ ಕೇಂದ್ರ ಸಚಿವ ಗಡ್ಕರಿ, ಶೇ. 20ಕ್ಕಿಂತ ಮೇಲ್ಪಟ್ಟ ಎಥೆನಾಲ್ ಮಿಶ್ರಿತ ಪೆಟ್ರೋಲ್ಗೆ ತೆರಿಗೆ ವಿನಾಯ್ತಿ ಘೋಷಿಸಿದರು. ಅದಾಗಿ ಮೂರೇ ದಿನಕ್ಕೆ ಶೇ. 100 ಎಥೆನಾಲ್ ಇಂಧನ ಬಳಕೆಯನ್ನು ಕಾನೂನುಬದ್ಧಗೊಳಿಸುವ ಮಾತನಾಡಿದ್ದಾರೆ. ಮತ್ತೆ ಎಥೆನಾಲ್ ಇಂಧನವನ್ನು ಭವಿಷ್ಯದ ಪೆಟ್ರೋಲ್ ಎಂದು ವ್ಯಾಖ್ಯಾನಿಸಿದ್ದಾರೆ. ಕಡಿಮೆ ವೆಚ್ಚದ, ಮಾಲಿನ್ಯ ಮುಕ್ತ, ಸಂಪೂರ್ಣ ಸ್ವದೇಶಿ ಇಂಧನ ಎಂದಿದ್ದಾರೆ. ಕೃಷಿಗೆ ಲಾಭದಾಯಕ ಎಂದು ರೈತರ ಮೂಗಿಗೆ ತುಪ್ಪ ಸವರಿದ್ದಾರೆ.
ಎಥೆನಾಲ್ ಅನ್ನು ಮುಖ್ಯವಾಗಿ ಸಕ್ಕರೆ ಅಥವಾ ಪಿಷ್ಟ ಹೊಂದಿರುವ ಕೃಷಿ ಉತ್ಪನ್ನಗಳಿಂದ ಹುದುಗುವಿಕೆ(fermentation) ಮೂಲಕ ಉತ್ಪಾದಿಸಲಾಗುತ್ತದೆ. ಕಬ್ಬಿನ ಕಾಕಂಬಿ, ಕಬ್ಬಿನ ರಸ, ಜೋಳ, ಗೋಧಿ, ಅಕ್ಕಿಯ ಕಚ್ಚಾ ವಸ್ತುಗಳಲ್ಲಿರುವ ಪಿಷ್ಟವನ್ನು ಮೊದಲು ಸಕ್ಕರೆಯಾಗಿ ಪರಿವರ್ತಿಸಲಾಗುತ್ತದೆ. ಆ ಗ್ಲೂಕೋಸ್ಗೆ ಯೀಸ್ಟ್ ಸೇರಿಸಿ ರಾಸಾಯನಿಕ ಕ್ರಿಯೆಯ ಮೂಲಕ ಉತ್ಪಾದಿಸಲಾಗುತ್ತದೆ. ಸದ್ಯಕ್ಕೆ ದೇಶದಲ್ಲಿ ಕಬ್ಬಿನ ಕಾಕಂಬಿ ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದಿಸಲಾಗುತ್ತಿದೆ. ಇದನ್ನು ಪೆಟ್ರೋಲ್ನೊಂದಿಗೆ ಮಿಶ್ರಣಕ್ಕೆ, ಮದ್ಯ ತಯಾರಿಕೆಗೆ, ಔಷಧ ಮತ್ತು ಸ್ಯಾನಿಟೈಸರ್ ಉತ್ಪಾದನೆಗೆ, ಕೈಗಾರಿಕೆಗಳಲ್ಲಿ ಬಳಸಲು ಉಪಯೋಗಿಸಲಾಗುತ್ತದೆ. ಕಬ್ಬಿನ ಗುಣಮಟ್ಟ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಸಾಮಾನ್ಯವಾಗಿ ಒಂದು ಟನ್ ಕಬ್ಬಿನಿಂದ ಸುಮಾರು 65ರಿಂದ 85 ಲೀಟರ್ ಎಥೆನಾಲ್ ಉತ್ಪಾದಿಸಬಹುದಾಗಿದೆ.
ಇಂತಹ ಎಥೆನಾಲ್ ಉತ್ಪಾದಿಸುವ ಕಂಪನಿಗಳು ದೇಶದಲ್ಲಿ ಸಾಕಷ್ಟಿವೆ. 2020ರಿಂದಲೇ ಕೇಂದ್ರ ಸರ್ಕಾರ ಕಬ್ಬು, ಜೋಳ, ಅಕ್ಕಿ, ಗೋಧಿ ಮುಂತಾದ ಕೃಷಿ ತ್ಯಾಜ್ಯಗಳಿಂದ ಎಥೆನಾಲ್ ಉತ್ಪಾದನೆ ಮಾಡುವ ಕಂಪನಿಗಳಿಗೆ ಸಾಲ ಸೌಲಭ್ಯ ಮತ್ತು ಬಡ್ಡಿ ಸಬ್ಸಿಡಿ ನೀಡುತ್ತ ಬಂದಿದೆ. ಸರ್ಕಾರದ ಈ ಅನುಕೂಲ ಪಡೆದ ಕಂಪನಿಗಳಲ್ಲಿ ಪ್ರಮುಖ ಫಲಾನುಭವಿಗಳು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಪುತ್ರರಾದ ಸಾರಂಗ್ ಮತ್ತು ನಿಖಿಲ್ ಗಡ್ಕರಿಯವರ, ಮಾನಸ್ ಹಾಗೂ ಸಿಯಾನ್ ಆಗ್ರೋ ಇಂಡಸ್ಟ್ರೀಸ್. ಈ ಕಂಪನಿಗಳು ಸಕ್ಕರೆ, ಡಿಸ್ಟಿಲರಿ ಮತ್ತು ಎಥೆನಾಲ್ ಕ್ಷೇತ್ರಗಳಲ್ಲಿ ವ್ಯವಹಾರ ನಡೆಸುತ್ತಿವೆ. ಈ ಕಂಪನಿಗಳಿಂದ ಸರ್ಕಾರ ನೇರವಾಗಿ ಎಥೆನಾಲ್ ಖರೀದಿಸುವುದಿಲ್ಲ. ಬದಲಾಗಿ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂ ಮುಂತಾದ ತೈಲ ಮಾರುಕಟ್ಟೆ ಕಂಪನಿಗಳು ಎಥೆನಾಲ್ ಖರೀದಿಸಿ ಪೆಟ್ರೋಲ್ಗೆ ಮಿಶ್ರಣ ಮಾಡುತ್ತವೆ. ಗ್ರಾಹಕರಿಗೆ ಒದಗಿಸುತ್ತವೆ.
ಇದನ್ನೂ ಓದಿ: ಮೋದಿ @ 12- ಮೆರೆದದ್ದೇ ಸಾಧನೆ, ಸುಳ್ಳಾಡಿದ್ದೇ ದಾಖಲೆ
ಅಪ್ಪ ನಿತಿನ್ ಗಡ್ಕರಿ ಎಥೆನಾಲ್ ಬಗ್ಗೆ ಒಲವು ಹೊಂದಿ, ಅದನ್ನು ಪೆಟ್ರೋಲ್ನೊಂದಿಗೆ ಮಿಶ್ರಣ ಮಾಡಲು ಹಂತ ಹಂತವಾಗಿ ಸರ್ಕಾರಿ ಆದೇಶ ಹೊರಡಿಸುತ್ತಿದ್ದಂತೆ, ಫೆಬ್ರವರಿ 2024ರಲ್ಲಿ ಗಡ್ಕರಿ ಪುತ್ರ ನಿಖಿಲ್ ಗಡ್ಕರಿಯವರ ಸಿಯಾನ್ ಆಗ್ರೋ ಇಂಡಸ್ಟ್ರೀಸ್, ಎಥೆನಾಲ್ ಉತ್ಪಾದನಾ ವಲಯವನ್ನು ಪ್ರವೇಶಿಸುತ್ತದೆ. ಆಗ ಆ ಕಂಪನಿಯ ಷೇರು ಬೆಲೆ ಕೇವಲ 41 ರೂ. ಆ ವರ್ಷ ಅದು ಎಥೆನಾಲ್ ಉತ್ಪಾದನೆಯಿಂದ ಗಳಿಸಿದ ಆದಾಯ 17 ಕೋಟಿ ರೂಪಾಯಿ. ಸಚಿವ ಗಡ್ಕರಿಯವರು ಜುಲೈ 2025ರ ಹೊತ್ತಿಗೆ ಎಥೆನಾಲ್ ಮಿಶ್ರಣವನ್ನು ಶೇ. 19ಕ್ಕೆ ಏರಿಸಿದರು. ಆ ಸಂದರ್ಭದಲ್ಲಿ ನಿಖಿಲ್ ಗಡ್ಕರಿಯವರ ಕಂಪನಿಯ ವಾರ್ಷಿಕ ವಹಿವಾಟು 2,061 ಕೋಟಿಗೆ ಏರಿಕೆಯಾಗುತ್ತದೆ. ಒಂದೇ ವರ್ಷದಲ್ಲಿ 17 ಕೋಟಿಯಿಂದ 510 ಕೋಟಿ ಆದಾಯ ಗಳಿಸುವ ಕಂಪನಿಯಾಗಿ ಹೊರಹೊಮ್ಮುತ್ತದೆ.
ಇಲ್ಲಿ ಸ್ವಜನಪಕ್ಷಪಾತವಿಲ್ಲ, ಅಧಿಕಾರ ದುರುಪಯೋಗವಿಲ್ಲ, ಭ್ರಷ್ಟಾಚಾರ ಕೂಡ ನಡೆದಿಲ್ಲ. ಸಂಘಪರಿವಾರ, ಬಿಜೆಪಿ ಮತ್ತು ದೇಶಭಕ್ತರ ಬಗ್ಗೆ ಇಂತಹ ಆರೋಪ ಮಾಡುವಂತಿಲ್ಲ.
ಹಾಗಾದರೆ ಎಥೆನಾಲ್ನಿಂದ ಲಾಭ ಯಾರಿಗೆ? ಕಬ್ಬು ಬೆಳೆಗಾರರಿಗಾ, ರೈತರಿಗಾ, ವಾಹನ ಮಾಲೀಕರಿಗಾ?




