ನಿರ್ಲಕ್ಷ್ಯವೇ ಅಥವಾ ಪಿತೂರಿಯೇ? ಪುಲ್ವಾಮಾದ ಸಂಪೂರ್ಣ ಸತ್ಯ ದೇಶ ಕೇಳುತ್ತಿದೆ…

Date:

ಫ್ರಂಟ್‍ಲೈನ್‍ನ ಲೇಖನದ ಪ್ರಕಾರ ಜಮ್ಮು ಕಾಶ್ಮೀರದ ಪೊಲೀಸರಿಗೆ ಮೊದಲ ಎಚ್ಚರಿಕೆ ಪುಲ್ವಾಮಾ ದಾಳಿಗೆ ಒಂದೂವರೆ ತಿಂಗಳ ಮುನ್ನ 2 ಮತ್ತು 3ನೆಯ ಜನವರಿ 2019ರಂದು ರಹಸ್ಯ ವರದಿಯಲ್ಲಿ ಸಿಕ್ಕಿತು. ಇದರಲ್ಲಿ ಹೇಳಿದ್ದೇನೆಂದರೆ, ದಕ್ಷಿಣ ಕಾಶ್ಮೀರದಲ್ಲಿ ಜೈಶೆ ಮೊಹಮ್ಮದ್ ‘ಕಿಸಾಸ್ ಮಿಷನ್’ನ ಅಡಿಯಲ್ಲಿ ಪ್ರತೀಕಾರದ ತಯಾರಿ ನಡೆಯುತ್ತಿದೆ ಎಂಬುದಾಗಿತ್ತು !

ಯಾವಾಗ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಅತ್ಯಂತ ಆಘಾತಕಾರಿಯಾದ ಸಂದರ್ಶನ ಬಂತೋ, ಆಗಿನಿಂದ ಟಿವಿ ಚಾನೆಲ್‍ಗಳು ಮತ್ತು ಪತ್ರಿಕೆಗಳು ಗರಬಡಿದಂತೆ ಸುಮ್ಮನಾಗಿವೆ. ಗುಲಾಂ ನಬಿ ಆಜಾದ್‍ರ ಸಣ್ಣಪುಟ್ಟ ಆರೋಪಗಳ ಮೇಲೆ ಗಂಟೆಗಟ್ಟಲೆ ಕಾರ್ಯಕ್ರಮ ನಡೆಸುವ ಚಾನೆಲ್‍ಗಳ ಬಳಿ ಈಗ ಬಹಿರಂಗಪಡಿಸಿದ ಅತ್ಯಂತ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಒಂದು ನಿಮಿಷವೂ ಇಲ್ಲ. 15ನೆಯ ಎಪ್ರಿಲ್‍ನ ಪತ್ರಿಕೆಗಳಲ್ಲಿ ಎಲ್ಲಿಯೂ ಈ ಸುದ್ದಿಯ ಸಣ್ಣ ಉಲ್ಲೇಖವೂ ಕಾಣಿಸಿಕೊಂಡಿಲ್ಲ.

ಒಂದು ವಿಷಯ ಇಲ್ಲಿ ಹೇಳಬೇಕಿದೆ. 2019ರ 14ನೆಯ ಫೆಬ್ರುವರಿಯಂದು ಪುಲ್ವಾಮಾದಲ್ಲಿ ಆದ ಭೀಕರ ಘಟನೆಯ ಕಾಲದಲ್ಲಿ ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಇತ್ತೀಚಿಗೆ, ಮೊದಲು ಪ್ರಕಾಶ್ ಟಂಡನ್ ಹಾಗೂ ನಂತರ ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದೇನೆಂದರೆ ಈ ಭೀಕರ ಘಟನೆಯು ಸರಕಾರದ ತಪ್ಪಿನಿಂದ ಆಗಿದೆ ಎಂದು. ಅವರು ಪ್ರಧಾನಮಂತ್ರಿಗೆ ಘಟನೆಯ ದಿನದಂದೇ ಈ ಭೀಕರ ಘಟನೆ ನಮ್ಮ ತಪ್ಪಿನಿಂದ ಆಗಿದೆ ಹಾಗೂ ಅದನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದರು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನಂತರ ಅಜಿತ್ ದೋವಾಲ್ ಇಬ್ಬರೂ ಮಲಿಕ್‍ಗೆ ಈ ವಿಷಯದ ಬಗ್ಗೆ ಸುಮ್ಮನಿರಬೇಕೆಂದು ತಾಕೀತು ಮಾಡಿದರು.

ಈ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್ ಹೇಳಿದ್ದೆಲ್ಲವೂ ಬ್ರಹ್ಮವಾಕ್ಯದಂತೆ ಸಂಪೂರ್ಣ ಸತ್ಯ ಎಂದು ಪರಿಗಣಿಸಬೇಕಿಲ್ಲ. ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಸತ್ಯಪಾಲ್ ಮಲಿಕ್ ಮತ್ತು ಪ್ರಧಾನಮಂತ್ರಿಯ ನಡುವೆ ಎಲ್ಲವೂ ಸರಿಯಿದ್ದಿಲ್ಲ ಎಂಬುದು ಗುಟ್ಟೇನಿಲ್ಲ. ಹಾಗೂ ಅವರು ಕಳೆದ ಸ್ವಲ್ಪ ಸಮಯದಿಂದ ಮುನಿಸಿಕೊಂಡಿದ್ದೂ ಕಂಡುಬಂದಿದೆ. ಇಂಥದರಲ್ಲಿ ಅವರ ಆರೋಪಗಳಲ್ಲಿ ಯಾವುದೇ ದ್ವೇಷ ಅಥವಾ ಸೇಡು ಕೆಲಸ ಮಾಡುತ್ತ, ಆರೋಪಗಳಲ್ಲಿ ಉತ್ಪ್ರೇಕ್ಷೆ ಅಥವಾ ಸುಳ್ಳು ಇರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಒಂದು ವೇಳೆ ಈ ಸಂದರ್ಶನದ ನಂತರ ರಾಷ್ಟ್ರೀಯ ಮೀಡಿಯಾ ಸತ್ಯಪಾಲ್ ಮಲಿಕ್‍ಗೆ ಕಠಿಣವಾದ ಪಾಟೀಸವಾಲು ಮಾಡಿದ್ದರೆ, ಅವರ ಎಲ್ಲಾ ದಾವೆಗಳನ್ನು ಪುಷ್ಟಿ ಮಾಡಿದ್ದರೆ, ಒಂದು ವೇಳೆ ಅವರು ಯಾವುದೇ ತಪ್ಪು ಹೇಳಿಕೆ ನೀಡಿದ್ದರೆ, ಅದನ್ನು ಖಂಡಿಸಿದ್ದರೆ, ಅದು ಖಂಡಿತವಾಗಿಯೂ ಸರಿಯಾದ ಕ್ರಮವಾಗುತ್ತಿತ್ತು. ಆದರೆ ಈ ವಿಷಯದ ಮೇಲೆ ಸಂಪೂರ್ಣ ಮೌನ ನೋಡಿದರೆ ಅನಿಸುವುದು ಏನೆಂದರೆ ‘ಈ ಸುದ್ದಿಯ ಕೈಮುಟ್ಟಿದರೆ ನೋಡಿ, ಹುಷಾರ್’ ಎಂದು ಮಾಧ್ಯಮಗಳಿಗೆ ಕರೆ ಮಾಡಿ ಹೇಳಿಲಾಗಿದೆ ಎಂದು. ಈ ಪ್ರಾಯೋಜಿತ ಮೌನವಂತೂ ಸಂದರ್ಶನವು ಬಹಿರಂಗಪಡಿಸಿದ ವಿಷಯಗಳ ತೂಕ ಇನ್ನಷ್ಟೂ ಹೆಚ್ಚಿಸುತ್ತಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ ಕೇವಲ ಈ ಒಂದು ಆಧಾರದ ಮೇಲೆ ಇಷ್ಟು ಗಂಭೀರವಾದ ವಿಷಯದ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳಬಾರದು. ಪುಲ್ವಾಮಾ ದಾಳಿಯ ಹಿಂದೆ ಸರಕಾರದ ನಿರ್ಲಕ್ಷತೆ ಅಥವಾ ಅದಕ್ಕಿಂತ ಆಳವಾದ ಪಿತೂರಿ ಇತ್ತೋ ಇಲ್ಲವೋ ಎಂಬುದರ ಬಗ್ಗೆ ಯಾವುದಾದರೂ ಸ್ವತಂತ್ರ ಪ್ರಮಾಣಗಳು ಇದಾವೆಯೇ ಎಂಬುದರ ತನಿಖೆ ಮಾಡಬೇಕು. ಅದೃಷ್ಟವಶಾತ್, ಪ್ರಮಾಣ ಹುಡುಕಲು ನಮಗೆ ಹೊಸದಾಗಿ ಅಧ್ಯಯನ ನಡೆಸುವ ಅವಶ್ಯಕತೆ ಇಲ್ಲ. ಇಂಗ್ಲೀಷ್ ಪತ್ರಿಕೆ ಫ್ರಂಟ್‍ಲೈನ್‍ನ ಫೆಬ್ರುವರಿ 2021ರ ಸಂಚಿಕೆಯಲ್ಲಿ ಆನಂದೋ ಭಕ್ತೊ ಅವರು ಸರಕಾರದ ಗುಪ್ತಚರ ವಿಭಾಗದ ಸಂದೇಶಗಳ ತಡಕಾಡಿ, ಬಹಿರಂಗಪಡಿಸಿದ್ದೇನೆಂದರೆ, ಈ ದಾಳಿಗೆ ಮುನ್ನ ಸರಕಾರಕ್ಕೆ ಒಂದಲ್ಲ ಎರಡಲ್ಲ, ಒಟ್ಟು 11 ಬಾರಿ ಗೂಢಚಾರಿ ಸೂಚನೆಗಳು ಬಂದು, ಇಂತಹದ್ದೇನೋ ಆಗುತ್ತೆ ಎಂಬ ರಹಸ್ಯ ಮಾಹಿತಿ ಸಿಕ್ಕಿತ್ತು. ಇದರ ಎಲ್ಲಾ ದಾಖಲೆಗಳು ಫ್ರಂಟ್‍ಲೈನ್ ಪತ್ರಿಕೆಯ ಬಳಿ ಇವೆ. ಆನಂದೋ ಭಕ್ತೊ ಅವರ ಈ ತನಿಖಾ ವರದಿಯನ್ನು ಇಲ್ಲಿಯವರೆಗೆ ಸರಕಾರ ಖಂಡಿಸಿಲ್ಲ.

ಸತ್ಯಪಾಲ್ ಮಲಿಕ್‍ರ ದಾವೆಗಳಿಗೆ ಪುಷ್ಟಿ ನೀಡುವ ಈ ತಥ್ಯಗಳನ್ನು ಒಂದು ಬಾರಿ ನೋಡುವ. ಫ್ರಂಟ್‍ಲೈನ್‍ನ ಲೇಖನದ ಪ್ರಕಾರ ಜಮ್ಮು ಕಾಶ್ಮೀರದ ಪೊಲೀಸರಿಗೆ ಮೊದಲ ಎಚ್ಚರಿಕೆ ಪುಲ್ವಾಮಾ ದಾಳಿಗೆ ಒಂದೂವರೆ ತಿಂಗಳ ಮುನ್ನ 2 ಮತ್ತು 3ನೆಯ ಜನವರಿ 2019ರಂದು ಜಮ್ಮು ಕಾಶ್ಮೀರದ ಡಿಜಿಪಿ ಮತ್ತು ಕಾಶ್ಮೀರ ರೇಂಜಿನ ಐಜಿಪಿಯ ಹೆಸರಿಗೆ ಒಂದು ರಹಸ್ಯ ವರದಿಯಲ್ಲಿ ಸಿಕ್ಕಿತು. ಇದರಲ್ಲಿ ಹೇಳಿದ್ದೇನೆಂದರೆ, ದಕ್ಷಿಣ ಕಾಶ್ಮೀರದಲ್ಲಿ ಜೈಶೆ ಮೊಹಮ್ಮದ್ ‘ಕಿಸಾಸ್ ಮಿಷನ್’ನ ಅಡಿಯಲ್ಲಿ ಪ್ರತೀಕಾರದ ತಯಾರಿ ನಡೆಯುತ್ತಿದೆ. ಈ ಎಚ್ಚರಿಕೆಯ ಗಂಭೀರತೆಗೆ ಒತ್ತು ನೀಡಿ ಈ ವರದಿಯು ನೆನಪಿಸಿದ್ದೇನೆಂದರೆ ಇದಕ್ಕೂ ಮುನ್ನ ಇಂತಹದ್ದೊಂದು ಎಚ್ಚರಿಕೆ ಬಂದ ನಂತರ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ನ ಕ್ಯಾಂಪಿನ ಮೇಲೆ ದಾಳಿ ಆಗಿತ್ತು. ಅದೇ ವಾರ 7ನೆಯ ಜನವರಿಯಂದು ಮೂರು ಉಗ್ರವಾದಿಗಳು (ಅದರಲ್ಲಿ ವಿದೇಶಿಯರೂ ಒಳಗೊಂಡಿದ್ದರು) ಕಾಶ್ಮೀರದ ಸೋಫಿಯಾ ಪ್ರದೇಶದಲ್ಲಿ ಯುವಕರಿಗೆ ಐಇಡಿ ಸ್ಪೋಟಕದ ತರಬೇತಿ ನೀಡುತ್ತಿದ್ದಾರೆ ಎಂಬ ಮೂರನೆಯ ಎಚ್ಚರಿಕೆ ಸಿಕ್ಕಿತ್ತು. ಪುಲ್ವಾಮಾದ ಅವಂತಿಪೋರ್ ಪ್ರದೇಶದಲ್ಲಿ ವಿದೇಶಿ ಉಗ್ರವಾದಿಗಳ ಸಹಯೋಗದಿಂದ 20 ಸ್ಥಳೀಯ ಉಗ್ರವಾದಿಗಳು ದೊಡ್ಡದೊಂದು ಕೆಲಸ ಮಾಡುವ ಯೋಜನೆ ಮಾಡುತ್ತಿದ್ದಾರೆ ಎಂಬ 18ನೆಯ ಜನವರಿಯಂದು ಸಿಕ್ಕ ರಹಸ್ಯ ವರದಿಯು ಇದಕ್ಕೆ ಪುಷ್ಟಿ ನೀಡಿತು. ಅಂದು ಮತ್ತು 21ನೆಯ ಜನವರಿಯಂದು ಗೊತ್ತಾಗಿದ್ದೇನೆಂದರೆ ಕಿಸಾಸ್ ಮಿಷನ್ ಅಡಿಯಲ್ಲಿ 2017ರಲ್ಲಿ ಜೈಶೆ ಮೊಹಮ್ಮದ್‍ನ ಮುಖ್ಯಸ್ಥನ ಸಹೋದರನ ಮಗ ತಲಹಾ ರಾಷೀದ್‍ನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಯೋಜನೆ ರಚಿಸಲಾಗುತ್ತಿದೆ ಎಂದು.

ಹಿರಿಯ ಪತ್ರಕರ್ತ ಕರಣ್‌ ಥಾಪರ್‌ ಮತ್ತು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್

ಆದರೆ ಅಲ್ಲಿಯ ತನಕ ಈ ದಾಳಿ ಎಲ್ಲಿ ಆಗುವುದು, ಯಾರು ಮಾಡುವರು ಹಾಗೂ ಕಾರ್ಯಾಚರಣೆ ನಡೆದರೆ ಯಾರ ವಿರುದ್ಧ ನಡೆಯುವುದು ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. 24 ಮತ್ತು 25ನೆಯ ಜನವರಿಯಿಂದ ಸಿಕ್ಕ ಗುಪ್ತ ಮಾಹಿತಿಯು ಈ ಕೊಂಡಿಯನ್ನೂ ಜೋಡಿಸಿತು. ಆಗ ತಿಳಿದು ಬಂದಿದ್ದೇನೆಂದರೆ, ಜೈಶೆ ಮೊಹಮ್ಮದ್‍ನ ಅವಂತಿಪೊರಾ ಗುಂಪು ಮುದಾಸ್ಸಿರ್ ಖಾನ್‍ನ ನೇತೃತ್ವದಲ್ಲಿ ದೊಡ್ಡ ಫಿದಾಯೀನ್ ದಾಳಿಯ ಬಗ್ಗೆ ವರದಿ ಬಂದಿತ್ತು ಹಾಗೂ ಆ ಗುಂಪು ಫುಲ್ವಾಮಾದ ಶಾಹಿದ್ ಬಾಬಾನ ಸಂಪರ್ಕದಲ್ಲಿತ್ತು. ಈಗ ಪೊಲೀಸರ ಬಳಿ ಕಾರ್ಯಾಚರಣೆ ನಡೆಸಲು ಅವಶ್ಯಕ ಮಾಹಿತಿ ಇತ್ತು. ಮುದಸ್ಸಿರ್ ಒಬ್ಬ ಸ್ಥಳೀಯ ಉಗ್ರವಾದಿಯಾಗಿದ್ದ ಹಾಗೂ ಅವನ ತನಕ ತಲುಪುವುದು ಅಸಾಧ್ಯವಾಗಿರಲಿಲ್ಲ. 25ನೆಯ ತಾರೀಕಿನಂದು ಮುದಾಸಿರ್ ಖಾನ್ ಮಿಡೂರಾ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಎಂಬ ಗುಪ್ತಚರ ವರದಿ ಹೇಳಿತು. ಅವಂತಿಪೊರಾ ಅಥವಾ ಪಾಂಪೋರ್ ಬಳಿ ದಾಳಿಯ ತಯಾರಿ ನಡೆಯುತ್ತವೆ ಎಂಬುದು ಆಗ ಸ್ಪಷ್ಟವಾಗಿತ್ತು. ಜೈಶೆ ಮೊಹಮ್ಮದ್ ಸಂಘಟನೆಯು ಪ್ರತೀಕಾರದ ಕಾರ್ಯಾಚರಣೆ ನಡೆಸಲಿದೆ ಎಂಬ ಸುದ್ದಿ 19ನೆಯ ಫೆಬ್ರುವರಿಯಂದು ಸಿಆರ್‌ಪಿಎಫ್ ಬಳಿಯೂ ಬಂದಿತ್ತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪುಲ್ವಾಮಾ ದುರಂತದ ಸ್ಫೋಟಕ ಸತ್ಯಗಳು- ಸರ್ಕಾರ ಮೌನ ಮುರಿಯಬೇಕು

ದಾಳಿಯ ಎರಡು ದಿನಗಳ ಮುನ್ನ ದಾಳಿ ಹೇಗೆ ಆಗಲಿದೆ ಎಂಬುದು ಗೊತ್ತಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಬಳಸುವ ದಾರಿಯಲ್ಲಿ ಐಇಡಿ ಸ್ಫೋಟದ ತಯಾರಿ ಜೈಶೆ ಮೊಹಮ್ಮದ್‍ನ ಪಾಕಿಸ್ತಾನ್ ಹ್ಯಾಂಡ್ಲರ್ ನಡೆಸುತ್ತಿದೆ ಎಂಬ ವರದಿ 12ನೆಯ ಫೆಬ್ರುವರಿಯಂದು ಕೇಂದ್ರ ಸರಕಾರದ ಗೂಢಚರ್ಯ ಸಂಸ್ಥೆ ಐಬಿಯ ಮಲ್ಟಿ ಎಜೆನ್ಸಿ ಸೆಂಟರ್‌ಗೆ ಬಂದು ತಲುಪಿತು. ಮತ್ತೆ ದಾಳಿಯ 24 ಗಂಟೆಗಳ ಮುನ್ನ ಕೊನೆಯ ಮತ್ತು ಹನ್ನೊಂದನೆಯ ಎಚ್ಚರಿಕೆ ಸಿಕ್ಕಿತು. ಅದರಲ್ಲಿ ಜೈಶೆ ಮೊಹಮ್ಮದ್ ಭದ್ರತಾ ಪಡೆಗಳ ದಾರಿಯಲ್ಲಿ ಐಇಡಿ ಸ್ಫೋಟ ಮಾಡಬಹುದು ಹಾಗೂ ಭದ್ರತಾ ಪಡೆಗಳಿಗೆ ತಕ್ಷಣ ಅಲರ್ಟ್ ಮಾಡಬೇಕು ಎಂದು ಹೇಳಲಾಗಿತ್ತು.

ಈ ಎಲ್ಲಾ ಎಚ್ಚರಿಕೆಯ ಹೊರತಾಗಿಯೂ ಮಾರನೆಯ ದಿನ ಅಂದರೆ 14ನೆಯ ಫೆಬ್ರುವರಿಯಂದು ಎರಡೂವರೆ ಸಾವಿರಕ್ಕಿಂತ ಹೆಚ್ಚು ಸಿಆರ್‌ಪಿಎಫ್‌ನ ಜವಾನರನ್ನು ಯಾವ ದಾರಿಯಲ್ಲಿ ಸ್ಫೋಟವಾಗಬಹುದಾದ ರಹಸ್ಯ ಮಾಹಿತಿ ಸಿಕ್ಕಿತ್ತೋ, ಅದೇ ದಾರಿಯಲ್ಲಿ ಕಳುಹಿಸಲಾಯಿತು. ರಸ್ತೆಯಲ್ಲಿ ಹೋಗುವ ಬದಲಿಗೆ ವಿಮಾನಗಳನ್ನು ಕಳುಹಿಸಬೇಕು ಎಂದು ಸಿಆರ್‌ಪಿಎಫ್‌ ಬೇಡಿಕೆ ಮಾಡಿತ್ತು ಆದರೆ, ಅವುಗಳನ್ನು ನಿರಾಕರಿಸಲಾಯಿತು. ಅದಷ್ಟೇ ಅಲ್ಲ, ಸತ್ಯಪಾಲ್ ಮಲಿಕ್ ಪ್ರಕಾರ ಆ ರಸ್ತೆಯ ಎಲ್ಲಾ ನಾಕಾಗಳಲ್ಲಿ ಸಂಚಾರ ನಿರ್ಬಂಧಿಸಲಾಗಿರಲಿಲ್ಲ. ಆಗ ಯಾವುದರ ಆತಂಕವಿತ್ತೋ ಅದೇ ಆಯಿತು. ಯಾವುದರ ಮಾಹಿತಿ ಮುಂಚೆಯೇ ಸಿಕ್ಕಿತ್ತೊ, ಅದೇ ಜೈಶೆ ಮೊಹಮ್ಮದ್ ಮುಖಾಂತರ, ಅದೇ ಮುದಾಸ್ಸಿರ್ ಖಾನ್‍ನ ನೇತೃತ್ವದಲ್ಲಿ ಅದೇ ಪುಲ್ವಾಮಾ ಅವಂತಿಪೊರಾ ಪ್ರದೇಶದಲ್ಲಿ ಐಇಡಿ ಸ್ಫೋಟ ಆಯಿತು. ನಮ್ಮ ನಲವತ್ತು ಜವಾನರು ಹುತಾತ್ಮರಾದರು.

ಇದನ್ನು ಓದಿದ್ದೀರಾ? ಇಂದು ಬಿಲ್ಕಿಸ್ ಬಾನೊ, ನಾಳೆ ಇನ್ಯಾರೋ, ಕಾರಣಕೊಡಿ: ಗುಜರಾತ್ ಸರ್ಕಾರಕ್ಕೆ ಸುಪ್ರೀಂ ‍ಛಾಟಿ

ಹಾಗಾಗಿಯೇ ಸತ್ಯಪಾಲ್ ಮಲಿಕ್‍ರ ಆರೋಪವನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಈ ಎಲ್ಲಾ ಪ್ರಮಾಣಗಳು ಮತ್ತು ಪ್ರಧಾನಮಂತ್ರಿಯು ಅವರಿಗೆ ಸುಮ್ಮನಿರಲು ಹೇಳಿದ್ದು, ರಾಷ್ಟ್ರೀಯ ಭದ್ರತೆಯ ಮೇಲೆ ಒಂದು ದೊಡ್ಡ ಪ್ರಶ್ನೆ ಎತ್ತಿಡುತ್ತವೆ. ಒಂದು ವೇಳೆ ಇಷ್ಟೆಲ್ಲಾ ಗುಪ್ತಚರ ಮಾಹಿತಿಯ ಹೊರತಾಗಿಯೂ ಭದ್ರತಾ ಪಡೆಗಳನ್ನು ಸಾವಿನ ದವಡೆಗೆ ನೂಕಿದರು ಎಂದರೆ ಇದು ಒಂದು ಅತ್ಯಂತ ಭೀಕರ ನಿರ್ಲಕ್ಷ್ಯತೆಯ ವಿಷಯವಾಗಿದೆ. ಒಂದು ವೇಳೆ ಹೀಗೆಯೇ ಆಗಿದ್ದಲ್ಲಿ, ಈ ಕ್ರಿಮಿನಲ್ ನಿರ್ಲಕ್ಷ್ಯತೆಯ ಹೊಣೆಗಾರಿಕೆ ಯಾರದ್ದು ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕಿದೆ. ಇಲ್ಲಿಯ ತನಕ ಯಾವುದೇ ಅಧಿಕಾರಿ ಅಥವಾ ಸಚಿವನ ವಿರುದ್ಧ ನಿರ್ಲಕ್ಷತೆಗಾಗಿ ಕ್ರಮ ಏಕೆ ಕೈಗೊಂಡಿಲ್ಲ? ಅಥವಾ ಇದು ನಿರ್ಲಕ್ಷ್ಯದ ವಿಷಯವಲ್ಲ, ಇದು ಒಂದು ಪಿತೂರಿಯಾಗಿತ್ತೇ? ಎಲ್ಲಾ ಗೊತ್ತಿದ್ದರೂ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಈ ಭೀಕರ ಘಟನೆ ಘಟಿಸಲು ಉದ್ದೇಶಪೂರ್ವಕವಾಗಿ ಬಿಡಲಾಯಿತೇ? ಇದೇ ಸತ್ಯವಾಗಿದ್ದಲ್ಲಿ, ಇದು ದೇಶದ್ರೋಹದ ಪ್ರಕರಣವಾಗುತ್ತದೆ. ಈ ಪಿತೂರಿ ಯಾರ ಸೂಚನೆಯ ಮೇರೆಗೆ ನಡೆದಿತ್ತು ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕಿದೆ. ಎಲ್ಲಿಯವರೆಗೆ ಈ ಪ್ರಶ್ನೆಗಳ ಉತ್ತರ ಸಿಗುವುದಿಲ್ಲವೋ, ಅಲ್ಲಿಯವರೆಗೆ ಸತ್ಯಪಾಲ್ ಮಲಿಕ್ ಎತ್ತಿರುವ ವಿಷಯಗಳು ಪ್ರತಿಧ್ವನಿಸುತ್ತಲೇ ಇರಲಿವೆ.

ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....